Janataa24 NEWS DESK

ಬೆಂಗಳೂರು: ಇನ್ನಿಲ್ಲದ ಇಕ್ಕಟ್ಟಿಗೆ ಸಿಲುಕಿದ್ದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಗೆ ಇಂದು ತಕ್ಕಮಟ್ಟಿಗೆ ರಿಲೀಫ್ ಸಿಕ್ಕಿದೆ ಎನ್ನಬಹುದು.
ವಿಧಾನಸಭೆ ಚುನಾವಣೆ ಬಿರುಸು ಪಡೆದುಕೊಂಡಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ಅನುಮತಿ ನೀಡಿ ರಾಜ್ಯ ಸರಕಾರ ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಆದರೆ ಇದೇ ಪ್ರಕರಣದಲ್ಲಿ ಸಿಬಿಐ ತನಿಖೆ ಹಾಗೂ ಎಫ್ಐಆರ್ ರದ್ದುಪಡಿಸಬೇಕೆಂದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಮತ್ತೂಂದು ಅರ್ಜಿ ಸಂಬಂಧ ಸಿಬಿಐ ತನಿಖೆಗೆ ಮೇ ಅಂತ್ಯದವರೆಗೆ ತಡೆ ನೀಡಿರುವುದರಿಂದ ಸದ್ಯಕ್ಕೆ ಡಿ.ಕೆ. ಶಿವಕುಮಾರ್ಗೆ ಯಾವುದೇ ಆಪತ್ತು ಎದುರಾಗುವುದಿಲ್ಲ. ಯಾಕೆಂದರೆ, ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಸರಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದ್ದರೂ, ಮತ್ತೂಂದು ಪ್ರಕರಣದಲ್ಲಿ ತಡೆ ಇರುವುದರಿಂದ ಸಿಬಿಐ ಇನ್ನೊಂದು ಆದೇಶಕ್ಕೆ ಕಾಯಬೇಕಾಗಿದೆ. ಹಾಗಾಗಿ ಸದ್ಯದ ಮಟ್ಟಿಗೆ ಸಿಬಿಐ ಯಾವುದೇ ಮುಂದಡಿ ಇಡುವಂತಿಲ್ಲ.

ಆದಾಯ ಮೀರಿ ಆಸ್ತಿ ಸಂಪಾದಿಸಿದ ಅರೋಪ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿದ್ದ ಸರಕಾರದ ಕ್ರಮವನ್ನು ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾದಿರಿಸಿದ್ದ ತೀರ್ಪನ್ನು ಗುರುವಾರ ಪ್ರಕಟಿಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಈ ಬಗ್ಗೆ ಮಾಧ್ಯಮಕ್ಕೆ ಸ್ಪಂದಿಸಿದ ಡಿಕೆ ಶಿವಕುಮಾರ್ ಕಳೆದ 15 ವರ್ಷಗಳಿಂದ ನಾನು ಯಾವುದೇ ಹೊಸ ಆಸ್ತಿಗಳನ್ನು ಸಂಪಾದಿಸಿರುವುದಿಲ್ಲ ಒಂದು ಮನೆಯನ್ನು ಹೊರತುಪಡಿಸಿ. ಇದನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿದಿದ್ದರೆ ನಮ್ಮನ್ನು ಇಷ್ಟು ಇಕ್ಕಟ್ಟಿಗೆ ಸಿಲುಕಿಸುವ ಅಗತ್ಯವಿರಲಿಲ್ಲ ಎಂದು ತಿಳಿಸಿರುತ್ತಾರೆ.
ರಿಲೀಫ್ ಸಿಕ್ಕ ಬೆನ್ನಲ್ಲೇ ಟೆಂಪಲ್ ರನ್..!
ಡಿಕೆ ಶಿವಕುಮಾರ್ ರವರು ನಾಳೆ ಬೆಳಗ್ಗೆ ಧರ್ಮಸ್ಥಳದಲ್ಲಿ ಪೂಜೆಗೆ ಸಿದ್ಧತೆ ನಡೆಸಲಾಗಿದೆ.