Janataa24 NEWS DESK

ತುರುವೇಕೆರೆ: ತಾಲೂಕಿನ ಸೊರವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಎಸ್ ಸಿ ಇಂದಿರಾ ರವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆಯನ್ನು ಏರ್ಪಡಿಸಲಾಗಿತ್ತು.

ಈ ಗ್ರಾಮ ಸಭೆಗೆ ನೋಡಲ್ ಅಧಿಕಾರಿಯಾಗಿ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರವಿಕುಮಾರ್ ರವರು ಭಾಗವಹಿಸಿದ್ದರು, ಈ ಗ್ರಾಮ ಪಂಚಾಯಿತಿಯು 16 ಜನ ಸದಸ್ಯರನ್ನು ಹೊಂದಿರುವ ಪಂಚಾಯತಿಯಾಗಿದ್ದು, ಈ ಸದಸ್ಯರಲ್ಲೇ ಎರಡು ಬಣಗಳಾಗಿದ್ದು,
ಒಂದು ಬಣ ಈ ಗ್ರಾಮ ಸಭೆಯ ಸಮಯಕ್ಕೆ ಸರಿಯಾಗಿ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇಟ್ಟು ಕಪ್ಪುಬಟ್ಟಿ ಧರಿಸಿಕೊಂಡು ಮೌನ ಪ್ರತಿಭಟನೆಗೆ ಮುಂದಾದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಬಳಿ ನೋಡಲ್ ಅಧಿಕಾರಿಯಾದ ರವಿಕುಮಾರ್ ಅವರು ಈ ಮೌನ ಪ್ರತಿಭಟನೆ ಉದ್ದೇಶ ಏನು ಎಂದು ಹೇಳಿದ ಪ್ರಶ್ನೆಗೆ ,ಸದಸ್ಯರಾದ ಸಂದೇಶ್ ರವರು ಉತ್ತರಿಸಿ. ಕಳೆದ ಕೆಲವು ದಿನಗಳ ಹಿಂದೆ ಇಲ್ಲಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಪಂಚಾಯಿತಿಯ ಒಳಗೆ ಕೂಡಿಹಾಕಿ ದಿಗ್ಬಂಧನ ಮಾಡಿದ್ದು, ಈ ವಿಚಾರವಾಗಿ ನನ್ನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ಹಾಗೂ ಈ ಅಧಿಕಾರಿಯೂ ನನ್ನ ಜೊತೆ ಇರುವ ಯಾವೊಬ್ಬ ಸದಸ್ಯರ ಮಾತಿಗೂ ಸೊಪ್ಪು ಹಾಕುತ್ತಿಲ್ಲ ಪಂಚಾಯಿತಿಯಲ್ಲಿ ಸರ್ವಾಧಿಕಾರಿಯ ಧೋರಣೆಯಿಂದ ನಡೆದುಕೊಳ್ಳುತ್ತಿದ್ದಾರೆ ಗ್ರಾಮ ಸಭೆಗೆ ಹಾಜರಾಗಲು ಸರಿಯಾದ ಮಾಹಿತಿ ಸಹ ನೀಡಿರುವುದಿಲ್ಲ ಎಂದು ಆರೋಪಿಸಿದರು.
ಆದುದರಿಂದ ಮೌನವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ,ಗ್ರಾಮ ಸಭೆ ನಡೆಯದಂತೆ ನಾವು ಅಡ್ಡಿಪಡಿಸುವುದಿಲ್ಲ ಸಭೆ ನಡೆಸಿ ಎಂದು ಎಲ್ಲಾ ಎಂಟು ಜನ ಸದಸ್ಯರು ಒಪ್ಪಿಗೆ ಸೂಚಿಸಿದರು.
ನಂತರ ಸಭೆ ಪ್ರಾರಂಭಗೊಂಡಿತು ಪ್ರಾರಂಭದಿಂದಲೂ 2020 -21 ಮತ್ತು 22ನೇ ಸಾಲಿನ ಕಾಮಗಾರಿಗಳ ಬಗ್ಗೆ ವಿವರಣೆ ನೀಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಬಾಬುರವರು ಮುಂದಾದಾಗ ಸಾರ್ವಜನಿಕರಿಂದ ದೂರುಗಳ ಸುರಿಮಳೆಯೇ ಸುರಿಯಿತು.
ಸಭೆಯೇ ನಡೆಯುವುದಿಲ್ಲವೇನೋ ಎಂಬಂತೆ ವಾತಾವರಣವು ಸೃಷ್ಟಿಯಾಯಿತು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಹೇಳಿ ಕಾಮಗಾರಿಗಳ ಅಕ್ರಮ ಬಿಲ್ಗಳ ಬಗ್ಗೆ ನೋಡಲ್ ಅಧಿಕಾರಿಗಳ ಬಳಿ ನೀವು ದೂರನ್ನು ನೀಡಿ ಎಂದರು.
ನಂತರ ಮುಂದುವರೆದು ಮಾತನಾಡಿದ ಅಭಿವೃದ್ಧಿ ಅಧಿಕಾರಿ ನಾನು ಮುಂದಿನ ದಿನಗಳಲ್ಲಿ ಸಾರ್ವಜನಿಕರಾದ ನೀವುಗಳು ಕೇಳಿರುವ ಅಕ್ರಮಗಳ ಬಗ್ಗೆ ಇರುವ ಬಿಲ್ಲುಗಳನ್ನು ದಾಖಲೆ ನೀಡುತ್ತೇನೆ.
ಒಟ್ಟಾರೆ ನನ್ನ ಅವಧಿಯಲ್ಲಿ 15ನೇ ಹಣಕಾಸು ಯೋಜನೆಯ ಕಾಮಗಾರಿ ನಡೆದಿಲ್ಲ, ನನ್ನ ಅವಧಿಯಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡುತ್ತೇನೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿ ಸಭೆ ಮುಂದುವರೆಸಿದರು.

ಆದರೂ ಈ ಸಭೆಯಂತೂ ಗೊಂದಲಗಳ ಗೂಡಾಗಿದ್ದು ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರಕದೆ ಇರುವುದು ವಿಪರ್ಯಾಸವೇ ಸರಿ, ಮತ್ತು ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳ ಮತ್ತು ಸದಸ್ಯರುಗಳ ಮೇಲೆ ಸಾರ್ವಜನಿಕರು ಹಿಡಿ ಶಾಪ ಹಾಕಿದರು.
ಒಟ್ಟಾರೆ ಇಂದು ನಡೆದ ಗ್ರಾಮ ಸಭೆ ಕೆಲವು ಗೊಂದಲಗಳಿಂದ ಕೂಡಿತ್ತಾದರೂ ಗ್ರಾಮ ಸಭೆ ಯಶಸ್ವಿಯಾಯಿತು , ಎಲ್ಲೋ ಒಂದು ಕಡೆ ಸಾರ್ವಜನಿಕರಲ್ಲಿ ಎರಡು ಬಣಗಳ ಸದಸ್ಯರ ಈ ಪಂಚಾಯಿತಿಯಲ್ಲಿ ಗ್ರಾಮ ಸಭೆ ಹೇಗೆ ಸಾಧ್ಯ ಎಂಬ ಗೊಂದಲವೂ ಕೂಡ ಎದ್ದು ಕಾಣುತ್ತಿತ್ತು.
ಮುಂದಿನ ದಿನಗಳಲ್ಲಾದರೂ ಈ ಪಂಚಾಯಿತಿಯ ಗ್ರಾಮ ಸಭೆ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ನಡೆಯುತ್ತದೆ ಇಲ್ಲವೋ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಗ್ರಾಮ ಸಭೆಯಲ್ಲಿ ಅಧ್ಯಕ್ಷರಾದ ಇಂದಿರಾ ಕೃಷ್ಣಸ್ವಾಮಿ , ಉಪಾಧ್ಯಕ್ಷರಾದ ಮಂಜುನಾಥ ಆರ್, ಸದಸ್ಯರುಗಳಾದ, ನೂರಯಾಷ್, ಮಹೇಶ್, ಗ್ರಂಥಾಲಯ ಮೇಲ್ವಿಚಾರಕರಾದ ಪ್ರೇಮ್ ಕುಮಾರ್ , ಅಂಗನವಾಡಿ ಕಾರ್ಯಕರ್ತೆಯರು ಇನ್ನು ಕೆಲವು ಸದಸ್ಯರು ಹಾಗೂ ಸಾರ್ವಜನಿಕರು ಊರಿನ ಮುಖಂಡರುಗಳು ಪಂಚಾಯತಿ ಸಿಬ್ಬಂದಿ ವರ್ಗದವರು ಆರಕ್ಷಕ ಸಿಬ್ಬಂದಿಯವರು ಈ ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ
ತುರುವೇಕೆರೆ: ಮಂಜುನಾಥ್