Tumkur: ಪ್ರೊ.ಬಿ.ಕೃಷ್ಣಪ್ಪ ಅವರ 86 ನೇ ಜಯಂತೋತ್ಸವ ಜೊತೆಯಲ್ಲಿ ದಸಂಸ ತಾಲ್ಲೂಕು ಸಮಿತಿ ಪುನರ್ ರಚನೆ.

ಗುಬ್ಬಿ: ದಲಿತ ಚಳವಳಿಯ ಪಿತಾಮಹರಾದ ಪ್ರೊ.ಬಿ.ಕೃಷ್ಣಪ್ಪ ಅವರ 86 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ 50 ವರ್ಷಕ್ಕೆ ಕಾಲಿಟ್ಟ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಮಿತಿಯ ಪುನರ್ ರಚನೆ ಸಭೆಯನ್ನು ಇದೇ ತಿಂಗಳ 17 ರಂದು ಆಯೋಜಿಸಲಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪಟ್ಟಣದ ಡಾ.ಬಾಬು ಜಗಜೀವನ ರಾಂ ಭವನದಲ್ಲಿ ಬೆಳಿಗ್ಗೆ 11 ಕ್ಕೆ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಪುನರ್ ರಚನೆ ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ದಲಿತ ಮುಖಂಡರು ಚರ್ಚಿಸಿ ಸೂಕ್ತ ಅಭ್ಯರ್ಥಿಯನ್ನು ತಾಲ್ಲೂಕು ಸಂಚಾಲಕರಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಶೋಷಿತರ ಸಮಗ್ರ ಪರಿವರ್ತನೆಗೆ ಜನ್ಮ ತಾಳಿದ ದಲಿತ ಸಂಘರ್ಷ ಸಮಿತಿ ನೇತೃತ್ವ ವಹಿಸಿದ ಪ್ರೊ.ಬಿ.ಕೃಷ್ಣಪ್ಪ ಅವರು ಡಾ.ಬಿ.ಆರ್.ಅಂಬೇಡ್ಕರ್ ಸಿದ್ಧಾಂತ, ಕಾನ್ಶಿರಾಮ್ ಅವರ ಕೆಮಿಸ್ಟ್ರಿ ಜೊತೆ ಕೃಷ್ಣಪ್ಪ ಅವರ ಸಂಘರ್ಷ ಸೇರಿ ರಚಿತವಾಗಿ ಮುನ್ನಡೆದ ಸಮಿತಿ ಈಗ 50 ವರ್ಷಕ್ಕೆ ಕಾಲಿಟ್ಟಿದೆ. ಈ ಹೋರಾಟದ ಹಾದಿ ಪ್ರಸ್ತುತ ದಲಿತ ಸಂಘಟನೆಯ ಕಾರ್ಯಕರ್ತರು ಮುನ್ನಡೆಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ. ಈ ಕಾರ್ಯಕ್ಕೆ ಸಮಿತಿ ಸಾಮಾಜಿಕ ಬದ್ಧತೆಯಲ್ಲಿ ಸಾಗಲಿದೆ ಎಂದರು.
ಸಮಾಜದಲ್ಲಿ ನೊಂದವರ ಪರ ನಿಂತು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಮಿತಿ ಕೆಲಸ ಮಾಡಲಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸದೃಢಗೊಳಿಸುವ ಹೋರಾಟ ನಿರಂತರ ಮಾಡಲು ತಾಲ್ಲೂಕು ಘಟಕವನ್ನು ಸಭೆಯಲ್ಲಿ ಹಾಜರಿದ್ದ ಜನರಿಂದಲೇ ಆಯ್ಕೆ ಮಾಡಲಾಗುವುದು ಎಂದ ಅವರು ಇದೇ ವೇದಿಕೆಯಲ್ಲಿ ಹಿರಿಯ ಹೋರಾಟಗಾರ ಮಾರಶೆಟ್ಟಿಹಳ್ಳಿ ಶಿವಯ್ಯ ಮತ್ತು ನಿವೃತ್ತ ಆರೋಗ್ಯ ಸಹಾಯಕಿ ಪುಟ್ಟಗೌರಮ್ಮ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಮಾರನಹಳ್ಳಿ ಶಿವಯ್ಯ, ಸಮಿತಿಯ ಪದಾಧಿಕಾರಿಗಳಾದ ಹರಿವೆಸಂದ್ರ ಕೃಷ್ಣಪ್ಪ, ಕಡಬ ಶಂಕರ್, ಕುಂದರನಹಳ್ಳಿ ನಟರಾಜ್, ಕೆ.ಎಲ್.ರವಿಕುಮಾರ್, ಮಹೇಶ್ ಹೊಸಹಳ್ಳಿ, ಜಗದೀಶ್ ನಿಟ್ಟೂರು ಇತರರು ಇದ್ದರು.