Janataa24 NEWS DESK

ಬೆಂಗಳೂರು: ಅವರೆಲ್ಲರೂ ಕೆಲಸ (Work) ಅರಸಿ ದೂರದೂರಿನಿಂದ ಬಂದು ಜೀವನ ಕಟ್ಟಿಕೊಂಡಿದ್ದರು. ಒಂದೇ ಚಿಕ್ಕ ರೂಮಿನಲ್ಲಿ (Room) ವಾಸವಾಗಿದ್ದರು. ಮಧ್ಯರಾತ್ರಿ ಮಲಗಿದ್ದ ಒಬ್ಬಾತ ಸಿಗರೇಟ್ (Cigarette) ಸೇದಲು ಕಿಡಿ ಹೊತ್ತಿಸಿದ್ದ. ಆದರೆ ಆ ಸಣ್ಣ ಕಿಡಿ ಇಡೀ ರೂಮಿಗೆ ಬೆಂಕಿ ಹೊತ್ತಿಸಿ 8 ಜನರ ಬಲಿ ಪಡೆದಿದೆ.
ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಹೊಸಕೋಟೆ (Hoskote) ತಾಲೂಕಿನ ಮೇಡಿಹಳ್ಳಿಯಲ್ಲಿ ದುರ್ಘಟನೆ ನಡೆದಿದೆ. ರೂಮಿನಲ್ಲಿದ್ದ ಗ್ಯಾಸ್ ಸಿಲಿಂಡರ್ (Gas Cylinder) ಸೋರಿಕೆಯಿಂದ ಸ್ಫೋಟ ಸಂಭವಿಸಿ 8 ಮಂದಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಿಗರೇಟ್ ಸೇದಲು ಬೆಂಕಿ ಹಚ್ಚಿದಾಗ ಇಡೀ ರೂಮ್ ಸ್ಫೋಟಮಾರ್ಚ್ 26ರ ಮಧ್ಯರಾತ್ರಿ ಈ ಅನಾಹುತ ನಡೆದಿದೆ. ಘಟನೆಯಲ್ಲಿ ಬಿಹಾರ ಮೂಲದ ಸುಮಯ್ ಗುಪ್ತಾ, ತಿಲಕ್ ರಾಮ, ಸನೋಜ್ ಶರ್ಮಾ, ನೀರಜ್ ಭಾರತಿ, ಚಂದ್ರಪಾಲ್, ಲಕ್ಷಣ, ನಿಕೋನ್ ಅನ್ಸಾರಿ, ಅಮಿತ್ ಕುಮಾರ್ ಸಾವನ್ನಪ್ಪಿದ್ದಾರೆ. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಇವರೆಲ್ಲಾ ಒಂದೇ ರೂಮ್ನಲ್ಲಿ ವಾಸಿಸುತ್ತಿದ್ದರು. ಗ್ಯಾಸ್ ಸೋರಿಕೆ ಆಗಿರುವುದು ಗೊತ್ತಾಗದೆ ಓರ್ವ ಸಿಗರೇಟ್ ಸೇದಲು ಬೆಂಕಿ ಹಚ್ಚಿದಾಗ ಇಡೀ ರೂಮ್ ಸ್ಫೋಟಗೊಂಡಿದೆ.ಘಟನೆ ಕುರಿತಂತೆ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು, ಮಾರ್ಚ್ 26ನೇ ತಾರೀಖು ರಾತ್ರಿ ಈ ಘಟನೆ ನಡೆದಿದೆ. ಸಿಲಿಂಡರ್ ಪೈಪ್ ಒಡೆದು ಗ್ಯಾಸ್ ಸೋರಿಕೆಯಾಗಿದೆ. ಆಗ ಮಧ್ಯರಾತ್ರಿ ಸ್ಪೋಟಗೊಂಡಿದ್ದು, ರೂಮ್ ನಲ್ಲಿ ಮಲಗಿದ್ದ ಎಂಟು ಮಂದಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಎಲ್ಲರೂ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಗಾಯಗೊಂಡ ಎಲ್ಲರನ್ನೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಎಲ್ಲಾ 8 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.