Janataa24 NEWS DESK

ಬೆಂಗಳೂರು: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಜೆಡಿಎಸ್ ನಾಯಕರಿಗೆ ಮತ್ತಷ್ಟು ಕಗ್ಗಂಟಾಗಿದೆ. ಹಾಸನ ಟಿಕೆಟ್ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದರಿಂದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ನಿವಾಸದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಭವಾನಿ ರೇವಣ್ಣ ಸಭೆಯ ಅರ್ಧಕ್ಕೆ ದೇವೇಗೌಡರ ನಿವಾಸದಿಂದ ಹೊರ ನಡೆದಿದ್ದಾರೆ.

ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಈ ವೇಳೆ ಭವಾನಿ ರೇವಣ್ಣ ಮುನಿಸಿಕೊಂಡು ಸಭೆಯಿಂದ ಅರ್ದಕ್ಕೆ ಹೊರ ನಡೆದಿದ್ದಾರೆ.
ದೇವೇಗೌಡರ ಮನೆಗೆ ಭವಾನಿ ರೇವಣ್ಣ, ಪತಿ ಹೆಚ್.ಡಿ ರೇವಣ್ಣ ಕಾರಿನಲ್ಲಿ ಜೊತೆಗೆ ಆಗಮಿಸಿದ್ದರು. ಆದರೆ ಸಭೆಯ ಮಧ್ಯೆ ದೇವೇಗೌಡರ ಮನೆಯಿಂದ ಹೊರ ಬಂದ ಭವಾನಿ ರೇವಣ್ಣ ಬೇರೊಂದು ಕಾರಿನಲ್ಲಿ ತೆರಳಿದರು. ಕಾರನ್ನು ನಿವಾಸದ ಪಾರ್ಕಿಂಗ್ಗೆ ಕರೆಸಿಕೊಂಡು, ತಮ್ಮ ಖಾಸಗಿ ಕಾರಿನಲ್ಲಿ ಪದ್ಮನಾಭನಗರ ನಿವಾಸದಿಂದ ಭವಾನಿ ರೇವಣ್ಣ ಹೊರಟರು. ಭವಾನಿ ರೇವಣ್ಣ ದೇವೇಗೌಡರ ಮನೆಯಿಂದ ಹೊರ ಬಂದ ಮೇಲೆ
ಹೆಚ್.ಡಿ.ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ. ರೇವಣ್ಣ ಮಾತ್ರ ಸಭೆಯಲ್ಲಿ ಉಪಸ್ಥಿತರಿದ್ದರು.
ದೇವೇಗೌಡರ ಮನೆಯಲ್ಲಿ ಸಭೆ ಆರಂಭವಾಗಿ ಕೇವಲ 10 ನಿಮಿಷ ಮಾತ್ರ ಭವಾನಿ ರೇವಣ್ಣ ಕುಳಿತಿದ್ದರು. ಭವಾನಿ ರೇವಣ್ಣ ಅವರು ಹೊರ ನಡೆದ ಬಳಿಕ ಹೆಚ್.ಡಿ ರೇವಣ್ಣ ಸಭೆ ಮುಗಿಸಿ ದೇವೇಗೌಡರ ನಿವಾಸದಿಂದ ಹೊರ ಬಂದರು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ರೇವಣ್ಣ ಹೊರನಡೆದದ್ದು ಹಾಸನ ರಾಜಕೀಯದಲ್ಲಿ ಮತ್ತಷ್ಟು ಗೊಂದಲಗಳು ಸೃಷ್ಟಿಯಾದಂತಿದೆ.

