Janataa24 NEWS DESK

ಹೈದರಾಬಾದ್: ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ (Andhra Pradesh) ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಮೇಲೆ 371 ಕೋಟಿ ರೂ. ಹಗರಣ (Scam) ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ.
ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ (Skill Development Corporation) ಅಕ್ರಮ ಎಸಗಿದ ಆರೋಪ ಇರುವ ಹಿನ್ನೆಲೆಯಲ್ಲಿ ಹೈದರಾಬಾದಿನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ನಂದ್ಯಾಲ್ನಲ್ಲಿ ಇಂದು ಮುಂಜಾನೆ ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ನಾಯ್ಡು ಮೇಲಿರುವ ಆರೋಪ ಏನು?
ಯುವಕರಿಗೆ ಉದ್ಯೋಗ ತರಬೇತಿ ನೀಡಲು ಅಂದಿನ ಮುಖ್ಯಮಂತ್ರಿ ನಾಯ್ಡು ಅವರ ನೇತೃತ್ವದಲ್ಲಿ ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ.
ಈ ಸಂಬಂಧ ಟಿಡಿಪಿ ಸರ್ಕಾರವು ಜರ್ಮನ್ ಎಂಜಿನಿಯರಿಂಗ್ ದೈತ್ಯ ಸೀಮೆನ್ಸ್ (Siemens) ಕಂಪನಿಯೊಂದಿಗೆ ತಿಳುವಳಿಕೆ ಒಪ್ಪಂದವನ್ನು (MoU) ಮಾಡಿಕೊಂಡಿತ್ತು. ಸೀಮೆನ್ಸ್, ಇಂಡಸ್ಟ್ರಿ ಸಾಫ್ಟ್ವೇರ್ ಇಂಡಿಯಾ ಲಿಮಿಟೆಡ್ ಮತ್ತು ಡಿಸೈನ್ ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ರಾಜ್ಯ ಕೌಶಲ್ಯ ಅಭಿವೃದ್ಧಿ ಸಂಸ್ಥೆಯು ಈ ಯೋಜನೆಯನ್ನು ಕಾರ್ಯಗತಗೊಳಿಸುವ ಉದ್ದೇಶವನ್ನು ಹೊಂದಿತ್ತು.
3,356 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಸರ್ಕಾರ 10% ಹಣವನ್ನು ಹೂಡಲಿದ್ದರೆ, ಸಿಮೆನ್ಸ್ 90% ಹಣವನ್ನು ಹೂಡಲು ಒಪ್ಪಿಕೊಂಡಿತ್ತು. ಸೀಮೆನ್ಸ್ ಈ ಯೋಜನೆಗೆ ಯಾವುದೇ ಹಣವನ್ನು ಹೂಡಿಕೆ ಮಾಡದಿದ್ದರೂ ಮೂರು ತಿಂಗಳ ಒಳಗಡೆ 371 ಕೋಟಿ ರೂ. ಹಣವನ್ನು ಐದು ಕಂತುಗಳಲ್ಲಿ ಪಾವತಿಸಲಾಗಿದೆ.

ಈ ಯೋಜನೆಗೆ ಸಂಬಂಧಿಸಿದ ಯಾವುದೇ ಕಡತಗಳಿಗೆ ಆಗಿನ ಪ್ರಧಾನ ಹಣಕಾಸು ಕಾರ್ಯದರ್ಶಿ ಮತ್ತು ಆಗಿನ ಮುಖ್ಯ ಕಾರ್ಯದರ್ಶಿ ಸಹಿ ಹಾಕಿರಲಿಲ್ಲ. ಹೀಗಾಗಿ ಸರ್ಕಾರ ಹಣವನ್ನು ಯಾರಿಗೆ ಬಿಡುಗಡೆ ಮಾಡಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಶೆಲ್ ಕಂಪನಿಗಳ ಮೂಲಕ ಖಾಸಗಿ ಸಂಸ್ಥೆಗಳಿಗೆ ಸರ್ಕಾರಿ ಹಣವನ್ನು ನಕಲಿ ಇನ್ವಾಯ್ಸ್ಗಳನ್ನು ಬಳಸಿಕೊಂಡು ಪಾವತಿಸಲಾಗಿದೆ. ಅಲೈಡ್ ಕಂಪ್ಯೂಟರ್ಸ್, ಸ್ಕಿಲ್ಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನಾಲೆಡ್ಜ್ ಪೋಡಿಯಂ, ಕ್ಯಾಡೆನ್ಸ್ ಪಾರ್ಟ್ನರ್ಸ್ ಮತ್ತು ಇಟಿಎ ಗ್ರೀನ್ಸ್ ಸೇರಿದಂತೆ ವಿವಿಧ ಶೆಲ್ ಕಂಪನಿಗಳಿಗೆ ಕೌಶಲ್ಯ ಅಭಿವೃದ್ಧಿಗಾಗಿ 241 ಕೋಟಿ ಪಾವತಿಸಲಾಗಿದೆ. ಟೆಂಡರ್ ಪ್ರಕ್ರಿಯೆಯಿಲ್ಲದೆ 371 ಕೋಟಿ ಬಿಡುಗಡೆ ಮಾಡಲಾಗಿದೆ. ಚಂದ್ರಬಾಬು ನಾಯ್ಡು ನಿರ್ದೇಶನದಂತೆ ಈ ಶೆಲ್ ಕಂಪನಿಗಳನ್ನು ಸ್ಥಾಪಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.