Document

ಈ ದೇಶದಲ್ಲಿ ಕಾನೂನು ಇರಬಾರದು ಎಂಬ ಉದ್ದೇಶ ಬಿಜೆಪಿಗೆ ಇದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಿ: ರಾಜ್ಯದಲ್ಲಿ ಕಾನೂನು ಕಾಪಾಡುವುದು ನಮ್ಮ ಕರ್ತವ್ಯ

Janataa24 NEWS DESK

images7666966681026322573

ಬೆಂಗಳೂರು: ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದಿನ ರಾಮ ಮಂದಿರ ಹೋರಾಟ ಪ್ರಕರಣದ ಆರೋಪಿ ಶ್ರೀಕಾಂತ್ ಪೂಜಾರಿ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಎಚ್ಚರಿಕೆಗೆ ಗೃಹ ಸಚಿವ ಪರಮೇಶ್ವರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ ಇನ್ಸ್‌ಪೆಕ್ಟರ್‌ ರನ್ನು ಜ.09 ರೊಳಗೆ ಅಮಾನತು ಮಾಡಬೇಕು ಇಲ್ಲದೇ ಇದ್ದಲ್ಲಿ ಠಾಣೆಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಈ ದೇಶದಲ್ಲಿ ಕಾನೂನು ಇರಬಾರದು ಎಂಬ ಉದ್ದೇಶ ಬಿಜೆಪಿಗೆ ಇದ್ದರೆ ಮುತ್ತಿಗೆ ಹಾಕಲಿ ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲ್ಲ. ಯಾಕೆ ಅಮಾನತು ಮಾಡಬೇಕು? ಅಮಾನತು ಮಾಡುವಂತಹ ತಪ್ಪು ಏನು ಮಾಡಿದ್ದಾರೆ ಎಂದು ಗೃಹ ಸಚಿವರು ಪ್ರಶ್ನಿಸಿದ್ದು, ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ ರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿರುವುದನ್ನೂ ಪರಮೇಶ್ವರ್ ನಿರಾಕರಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಕಾಪಾಡೋದು ನಮ್ಮ ಕರ್ತವ್ಯ. ಕಾನೂನಿನ ಪ್ರಕಾರ ಹುಬ್ಬಳ್ಳಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಅವರ ಬಂಧನ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ವೇಳೆ ಆಗುತ್ತಿದೆ ಎನ್ನುವುದನ್ನು ಹೊರತುಪಡಿಸಿದರೆ, ಪೊಲೀಸರು ಕಾನೂನು ವಿರುದ್ಧ ಏನು ಕೆಲಸ ಮಾಡಿಲ್ಲ. ಬಿಜೆಪಿ ಅವರು ಅನಾವಶ್ಯಕವಾಗಿ ಇದನ್ನು ದೊಡ್ಡ ರಾಜಕೀಯ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ರಾಜಕೀಯವನ್ನು ನಾವು ಸಹಿಸಲು ಸಾಧ್ಯವಿಲ್ಲ. ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

Document

Leave a Reply

Your email address will not be published. Required fields are marked *