Document

ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ, ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ಕಿಡಿ

Janataa24 NEWS DESK

siddaramaiah1 105299375

ಮೈಸೂರು: ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ, ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ನಾವು ಯಾರಾದರೂ ತಪ್ಪು ಮಾಡಿದರೆ ಅದನ್ನು ಒಪ್ಪುವುದಿಲ್ಲ. ನಾವು ದ್ವೇಷದ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಎಚ್ ಡಿ ಕುಮಾರಸ್ವಾಮಿ ಹೇಳುವುದೆಲ್ಲಾ ಸುಳ್ಳು. ಎಚ್ ಡಿ ಕುಮಾರಸ್ವಾಮಿ, ಇವತ್ತಿನವರೆಗೆ ಯಾವುದಾದರೂ ಸತ್ಯ ಹೇಳಿದ್ರೆ ತೋರಿಸಿ. ಅವರು ಒಂದೇ ಒಂದು ವಿಚಾರದಲ್ಲಿ ಸತ್ಯ ಹೇಳಿದ್ದಾರಾ ಹೇಳಿ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಬರೀ ಹಿಟ್ ಅಂಡ್ ರನ್ ಮಾಡ್ತಾರೆ. ನನ್ನ ಮಗನ ವಿಚಾರದಲ್ಲಿ ನಿನ್ನೆ ಸುಮ್ಮನೆ ಸುಳ್ಳು ಹಬ್ಬಿಸಿದ್ರು. ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ. ಈಗ ನನ್ನ ಪರವಾಗಿ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಜನರ ಕೆಲಸ ಮಾಡುವುದು ತಪ್ಪಾ‌. ಕೆಡಿಪಿ ಸದಸ್ಯನಾಗಿರುವ ಕಾರಣ ಕೆಲವು ವಿಚಾರಗಳ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ದಾನೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿದ್ರೆ ಹೇಗೆ ಹೇಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.

ಪಂಚರಾಜ್ಯಗಳಲ್ಲಿ ಕೈ ಜಯಭೇರಿ
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ ಸಿಗಲಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಮಧ್ಯಪ್ರದೇಶ, ಛತ್ತೀಸ್ ಗಡ್ ನಲ್ಲಿ ಮತದಾನ ನಡೆಯುತ್ತಿದೆ. ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ, ಮಿಜೋರಾಂ ಎಲ್ಲಾ ಕಡೆ ಕಾಂಗ್ರೆಸ್ ಗೆಲ್ಲುತ್ತದೆ. ಈ ಚುನಾವಣೆಯ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ.

ಈಗ ನವೆಂಬರ್‌ನಲ್ಲಿ ಇದ್ದೇವೆ. ಲೋಕಸಭೆ ಚುನಾವಣೆಗೆ ಮಾರ್ಚ್ ಕೊನೆಯಲ್ಲಿ ನೋಟಿಫಿಕೇಷನ್ ಆಗಲಿದೆ.ರಾಮಮಂದಿರ ನಿರ್ಮಾಣ ಹೊಸ ವಿಚಾರ ಅಲ್ಲ. ರಾಮಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನ ಆಗಿದೆ. ಅದರಂತೆ ದೇವಾಲಯ ನಿರ್ಮಾಣ ಆಗುತ್ತಿದೆ. ರಾಮಮಂದಿರದಿಂದ ಮತದಾರರು ಬದಲಾವಣೆ ಆಗುತ್ತಾರೆ. ಅನ್ನೋದು ತಪ್ಪು. ದೇಶದ ಜನ ವಿವಿಧತೆಯಲ್ಲಿ ಏಕತೆ ಬಯಸುತ್ತಾರೆ. ಬ್ರಿಟಿಷರು, ಮೊಘಲರ ದಾಳಿಯ ನಂತರವೂ ದೇಶ ಒಂದಾಗಿದೆ. ಬೇರೆ ಬೇರೆ ವೇಶ, ಭಾಷೆ ಇದ್ದರೂ ಒಗ್ಗಟ್ಟು ಇದೆ. ನಾವು ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟುಕೊಂಡವರು ಎಂದರು.

ಮೋದಿಗೆ ಕರ್ನಾಟಕದ ಭಯಕರ್ನಾಟಕ, ಸಿದ್ದರಾಮಯ್ಯ ಬಗ್ಗೆ ಪ್ರಧಾನಿ ಮೋದಿಗೆ ಭಯ. ಆದ್ದರಿಂದಲೇ ಎಲ್ಲ ಕಡೆ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಮೋದಿ ವಿರೋಧಿಸಿದ್ದರು. ಈಗ ಮೋದಿ ಅವರೇ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಇತ್ತೀಚೆಗೆ ವಿಕಸಿತ ಭಾರತ್ ಯಾತ್ರೆ ಶುರು ಮಾಡಿದ್ದಾರೆ.

ಅದರಲ್ಲಿ ಪ್ರಧಾನ ಮಂತ್ರಿಗಳ ಗ್ಯಾರಂಟಿ ಯೋಜನೆ ಅಂತ ಬೋರ್ಡ್ ಹಾಕಿದ್ದಾರೆ. ಪ್ರಧಾನಿ ಯಾರು ನರೇಂದ್ರ ಮೋದಿ ಅಲ್ವಾ ? ಇದನ್ನೇ ರಾಜಕೀಯ ಇಬ್ಬಂದಿತನ ಅನ್ನೋದು ಅಂತ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು

ಈ ಬಾರಿ ಟೀಂ ಇಂಡಿಯಾ ‘ವಿಶ್ವಕಪ್‌’ ಗೆದ್ದೇ ಗೆಲ್ಲುತ್ತೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ನಾನು ಬೆಂಗಳೂರಿನಲ್ಲಿ ಒಂದು ಪಂದ್ಯ ನೋಡಿದ್ದೆ. ನವೆಂಬರ್ 19 ರಂದು ಫೈನಲ್ ಪಂದ್ಯವನ್ನು ವೀಕ್ಷಣೆ ಮಾಡ್ತೀನಿ. ಭಾರತ ತಂಡದ ಎಲ್ಲಾ ಆಟಗಾರರು ಚೆನ್ನಾಗಿ ಆಟ ಆಡ್ತಿದ್ದಾರೆ. ಇದೇ ರೀತಿ ಎಲ್ಲರೂ ಒಗ್ಗೂಡಿ ಹೋರಾಡಿದರೆ ಗೆಲ್ತಾರೆ. ಒಂದು ಟೀಂ ಆಗಿ ಆಟವಾಡಿದರೆ ಗೆಲುವು ಸಾಧ್ಯ. ಎಲ್ಲರೂ ಒಗ್ಗೂಡಿ ಉತ್ತಮವಾಗಿ ಆಟವಾಡಲಿ. ನಾನು ರಾತ್ರಿ 9.30ರ ಮೇಲೆ ಮನೆಗೆ ಹೋಗುವುದು. ಸಮಯ ಸಿಕ್ಕಾಗ ನಾನು ಮನೆಯಲ್ಲಿ ಕ್ರಿಕೆಟ್ ನೋಡ್ತೀನಿ‌ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Document

Leave a Reply

Your email address will not be published. Required fields are marked *