Janataa24 NEWS DESK
ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ ವತಿಯಿಂದ ಆರಣ್ಯ ಇಲಾಖೆಗೆ ಕಸದ ಡಬ್ಬಗಳನ್ನು ವಿತರಣೆ: ಸ್ವಾಮಿ ಜಪಾನಂದಜೀ.

ಪಾವಗಡ: ಶ್ರೀ ರಾಮಕೃಷ್ಣ ಸೇವಾಶ್ರಮ ಸದಾ ಒಂದಲ್ಲ ಒಂದು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುತ್ತದೆ. ಇತ್ತೀಚೆಗೆ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಒಂದು ಮನವಿಯನ್ನು ನೀಡಿದರು. ಅದೇನೆಂದರೆ ಪಾವಗಡದ ಮುಖ್ಯ ದ್ವಾರದಲ್ಲಿಯೇ ಇರುವಂತಹ ಶ್ರೀಮತಿ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಪ್ರತಿ ದಿನ ನೂರಾರು ಪ್ರವಾಸಿಗರು ಹಾಗೂ ನಾಗರಿಕರು ಭೇಟಿ ನೀಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಉದ್ಯಾನವನದ ಮುಖ್ಯ ಭಾಗಗಳಲ್ಲಿ ಕಸದ ನಿರ್ವಹಣೆಗಾಗಿ ಬುಟ್ಟಿಗಳನ್ನು ನೀಡಿದ್ದಲ್ಲಿ ಸಾರ್ವಜನಿಕರು ಆ ಡಬ್ಬಗಳಲ್ಲಿಯೇ ಕಸವನ್ನು ಹಾಕುವಂತಾಗುತ್ತದೆ ಎಂದು ತಿಳಿಸಿದರು. ತತ್ಕ್ಷಣ ಪೂಜ್ಯ ಸ್ವಾಮೀಜಿಯವರು ಅತ್ಯಂತ ಶ್ರೇಷ್ಠತಮವಾದ, ದೃಢವಾದ ಕಸದ ಡಬ್ಬಗಳನ್ನು ಇಲಾಖೆಗೆ ನೀಡಿರುತ್ತಾರೆ. ಇಂದು ಇಲಾಖೆಯ ಪರವಾಗಿ ಶ್ರೀ ಬಸವರಾಜು, ಅರಣ್ಯ ಇಲಾಖೆಯ ಅಧಿಕಾರಿಗಳು ಇವುಗಳನ್ನು ಸ್ವೀಕರಿಸಿದರು. ಈ ವ್ಯವಸ್ಥೆಯ ಮೂಲಕ ಸಾರ್ವಜನಿಕರು ಹಾಗೂ ಉದ್ಯಾನವನಕ್ಕೆ ಭೇಟಿ ನೀಡುವವರು ಕಸವನ್ನು ಅಲ್ಲಿ ಇಲ್ಲಿ ಎಸೆಯದೆ ಈ ಕಸದ ಡಬ್ಬಗಳಲ್ಲಿಯೇ ಹಾಕಿದ್ದಲ್ಲಿ ಉದ್ಯಾನವನ ಶುಚಿಯಾಗಿರುವಂತೆ ಸಹಕರಿಸಬಹುದಾಗಿದೆ. ನಾಗರಿಕರು ತಮ್ಮ ಸಮಾಜಮುಖಿ ಪ್ರಜ್ಞೆಯಿಂದ ಈ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಸಮಾಜಕ್ಕೆ, ಅರಣ್ಯ ಇಲಾಖೆಗೆ ಹಾಗೂ ಪರಿಸರಕ್ಕೆ ಸಹಕಾರಿಯಾಗುವಂತೆ ವರ್ತಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ