Janataa24 NEWS DESK
ತುಮಕೂರಿನಲ್ಲಿ ರಂಗೇರಿದೆ ಲೋಕಸಭಾ ಚುನಾವಣೆ ಕಾವು.

ತುಮಕೂರು: ಮಾಜಿ ಸಚಿವ ವಿ ಸೋಮಣ್ಣ ನವರಿಗೆ ಬಿಜೆಪಿ ಲೋಕಸಭಾ ಟಿಕೆಟ್ ಫೈನಲ್ ಎನ್ನುವಷ್ಟರ ಮಟ್ಟಿಗೆ ಸದ್ದಾಗಿತ್ತು. ಇದೀಗ ಸ್ಥಳೀಯ ನಾಯಕರುಗಳ ಅಸಮಾಧಾನ ಒಂದೊಂದಾಗಿ ಹೊರ ಬೀಳುತ್ತಿದೆ.
ಬಿಜೆಪಿ ಪಾಲಿಗೆ ತುಮಕೂರು ಲೋಕಸಭಾ(LokaSabha) ಕ್ಷೇತ್ರ ಕಬ್ಬಿಣದ ಕಡಲೆಯಂತಾಗಿದೆ. ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ತುಮಕೂರು ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿದೆ ಎನ್ನುವ ಸುದ್ದಿ ಬರುತ್ತಿದೆ. ಇದರ ಬೆನ್ನಲ್ಲಿಯೇ ತುಮಕೂರು ಬಿಜೆಪಿಯಲ್ಲಿ ಲೋಕಲ್ ಕೂಗು ಗಟ್ಟಿಯಾಗಿದೆ. ಸ್ಪರ್ಧೆಗೆ ಸ್ಥಳೀಯ ನಾಯಕರಿಲ್ವಾ, ಹೊರಗಿನವರೇಕೆ? ಎಂದು ಪ್ರಶ್ನಿಸುತ್ತಿರುವ ತುಮಕೂರು ಜಿಲ್ಲಾ ನಾಯಕರು ಸೋಮಣ್ಣ ಸೋತ್ರೆ ನಮ್ಮನ್ನು ಹೊಣೆಯಾಗಿಸಬೇಡಿ ಎಂದು ಸ್ಪಷ್ಟ ಸಂದೇಶವನ್ನು ನಾಯಕರಿಗೆ ನೀಡಿದ್ದಾರೆ.

ಸಂಸದ ಜಿ ಎಸ್ ಬಸವರಾಜು ನಿವೃತ್ತಿಯಿಂದ ಬಿಜೆಪಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿಕೆ ದೊಡ್ಡ ತಲೆನೋವಾಗಿದೆ. ಟಿಕೆಟ್ಗೆ ಆರೋಗ್ಯಕರ ಸಹಜ, ಅವಶ್ಯಕ ಪೈಪೋಟಿ ಒಂದೆಡೆಯಾದರೆ ‘ಲೋಕಲ್’ ಕೂಗು ಮತ್ತೊಂದೆಡೆ!
ಮಾಜಿ ಸಚಿವ ವಿ ಸೋಮಣ್ಣ ಸ್ಪರ್ಧೆ ಬಯಸುವವರಿಗಿಂತ ವಿರೋಧಿಸುವವರ ಸಂಖ್ಯೆಯೇ ಹೆಚ್ಚಿದೆ. ಅದರಲ್ಲೂ ಟಿಕೆಟ್ ಆಕಾಂಕ್ಷಿಗಳು ಸದ್ದಿಲ್ಲದೆ ತೆರೆಮರೆಯಲ್ಲಿ ಒಮ್ಮತದ ‘ಸ್ಥಳೀಯ’ ಅಭ್ಯರ್ಥಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಬಹಿರಂಗವಾಗಿ ವಿ ಸೋಮಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುವುದರ ಜತೆಗೆ, ‘ಅವರು ಸೋತರೆ ನಾವು ಹೊಣೆಯಲ್ಲ’ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.
ಇನ್ನೋರ್ವ ಪ್ರಬಲ ಆಕಾಂಕ್ಷಿ ಎಸ್ಪಿ ಚಿದಾನಂದ್, ”ವಿ.ಸೋಮಣ್ಣನವರು ನಮ್ಮ ಗುರುಗಳು. ಅವರು ನುಡಿದಂತೆ ನಡೆಯುತ್ತಾರೆ. ಅವರು ನಮ್ಮಂತವರಿಗೆ ಬೆಂಬಲವಾಗಿ ನಿಲ್ಲುತ್ತಾರೆಯೆ ಹೊರತು, ಸ್ಪರ್ಧೆ ಮಾಡುವುದಿಲ್ಲ” ಎಂದಿದ್ದಾರೆ. ಜತೆಗೆ ಇವರಲ್ಲದೇ ರೇಸ್ನಲ್ಲಿ ಸ್ಥಳೀಯರಾದ ಡಾ ಎಸ್ ಪರಮೇಶ್, ಡಾ ಎಂ ಆರ್ ಹುಲಿನಾಯ್ಕರ್, ವಿನಯ್ ಬಿದರೆ, ಎಚ್ಎನ್ ಚಂದ್ರಶೇಖರ್, ಎಂಬಿ ನಂದೀಶ್, ದೊಡ್ಮನೆ ಗೋಪಾಲಗೌಡ, ಎಸ್ಡಿ ದಿಲೀಪ್ ಕುಮಾರ್ ಕೂಡಾ ಇದ್ದಾರೆ.
ತೀವ್ರ ವಿರೋಧ

ವಿ.ಸೋಮಣ್ಣ ಸ್ಪರ್ಧೆಗೆ ಸಂಸದ ಜಿಎಸ್ ಬಸವರಾಜು ಹಾಗೂ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತ್ರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇನ್ನುಳಿದಂತೆ ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ಗೌಡ, ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಂ, ತಿಪಟೂರು ಮಾಜಿ ಶಾಸಕ ಬಿ.ಸಿ.ನಾಗೇಶ್, ಗುಬ್ಬಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಸೇರಿದಂತೆ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬಲ ನಾಯಕರ ವಿರೋಧವಿದೆ.

ತುಮಕೂರಲ್ಲಿ ಲಿಂಗಾಯತ ಸಮುದಾಯಕ್ಕೆ ಮತ ಬಲವಿದೆ. ಜತೆಗೆ ಒಬಿಸಿಯೂ ಪ್ರಬಲವಾಗಿದೆ. ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಲ್ಲಿ ಜೆ.ಸಿ.ಮಾಧುಸ್ವಾಮಿ, ಡಾ.ಎಸ್.ಪರಮೇಶ್, ವಿನಯ ಬಿದರೆ, ಎಚ್.ಎನ್.ಚಂದ್ರಶೇಖರ್, ಎಂ.ಬಿ.ನಂದೀಶ್, ಎಸ್.ಡಿ.ದಿಲೀಪ್ ಕುಮಾರ್ ಲಿಂಗಾಯತ ಸಮುದಾಯದ ನಾಯಕರು. ಜೆ.ಸಿ.ಮಾಧುಸ್ವಾಮಿಗೆ ಬಿಎಸ್ವೈ ಬಲ ಹಾಗೂ ಅತ್ಯುತ್ತಮ ಸಂಸದೀಯ ಪಟು ಎಂಬ ಕೀರ್ತಿ, ಜತೆಜತೆಗೆ ನಾಯಕತ್ವ ವರದಾನ.
ವಿ.ಸೋಮಣ್ಣ ಅಡ್ಡಿ ಏನು?

ವಿ.ಸೋಮಣ್ಣ ಜಿಲ್ಲೆಯವರಲ್ಲ
ಸ್ಥಳೀಯ ಆಕಾಂಕ್ಷಿಗಳ ದಂಡೇ ಇದೆ
ಸೋಮಣ್ಣಗೆ ಮಣೆ ಹಾಕಿದರೆ ಸ್ಥಳೀಯ ನಾಯಕತ್ವದ ಶಕ್ತಿಗೆ ಪ್ರಶ್ನೆ
ಇದುವರೆಗೆ ಜಿಲ್ಲೆಯಲ್ಲಿ ದುಡಿದವರ ಕಡೆಗಣನೆ, ಕಾರ್ಯಕರ್ತರ ಅಸಮಾಧಾನ
ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಈ ಹಿಂದೆ ಪುತ್ರ ಅರುಣ್ ಸೋಮಣ್ಣರನ್ನು ಕರೆತರುವ ಯತ್ನ ನಡೆಸಿದ್ದು.
ಸಂಸದ ಜಿ.ಎಸ್.ಬಸವರಾಜು, ಹೆಬ್ಬಾಕ ರವಿಶಂಕರ್ ಹೊರತುಪಡಿಸಿದ ಉಳಿದ ಯಾವ ನಾಯಕರ ಬಲವೂ ಇಲ್ಲ.
https://www.janataa24.com/bengaluru-36c-in…due-to-sunstroke/