Janataa24 NEWS DESK

ಬೆಂಗಳೂರು: ಭಾನುವಾರ ನಗರದಲ್ಲಿ ಮುಂದುವರಿದ ಗಾಳಿ ಸಹಿತ ಭಾರಿ ಮಳೆ ಅಬ್ಬರಕ್ಕೆ(Heavy Rainfall) ಆಂಧ್ರಪ್ರದೇಶ ಮೂಲದ ಯುವತಿ ಮೃತಪಟ್ಟಿದ್ದಾರೆ. ಇದರಿಂದಾಗಿ ಮಳೆ ಅವಘಡಕ್ಕೆ ಪ್ರಸಕ್ತ ವರ್ಷದಲ್ಲಿ ಮೊದಲ ಸಾವು(Death) ಸಂಭವಿಸಿದ ಘಟನೆ ಇದಾಗಿದೆ. ನಗರದ ಹಲವು ಕಡೆಗಳಲ್ಲಿ ಶನಿವಾರ ಮತ್ತು ಭಾನುವಾರ ಸುರಿದ ಆಲಿಕಲ್ಲು ಮಳೆಗೆ ನೂರಾರು ಮರಗಳು(Trees) ಧರೆಗುರುಳಿವೆ.
ಶನಿವಾರ ಸಂಜೆಯೂ ಸುರಿದಿದ್ದ ಮಳೆಗೆ ರಸ್ತೆಗೆ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವಾಗಲೇ ಭಾನುವಾರ ಮತ್ತೆ ಅಬ್ಬರಿಸಿದ ಮಳೆಯಿಂದ ನೂರಕ್ಕೂ ಹೆಚ್ಚು ಮರಗಳು ಧರಾಶಾಹಿಯಾಗಿವೆ. ಮಧ್ಯಾಹ್ನ ವೇಳೆ ಕಗ್ಗತ್ತಲ ಕಾರ್ಮೋಡ ಆವರಿಸಿದ ಕ್ಷಣಾರ್ಧದಲ್ಲೇ ಬಿರುಗಾಳಿ ಉಂಟಾಯಿತು. ಮೊದಲು ಕುಮಾರಕೃಪ(Kumarakrupa) ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತು ಮುಂಭಾಗದ ಚಲಿಸುತ್ತಿದ್ದ ಕಾರು-ಬೈಕ್ ಮೇಲೆ, ಮೈಸೂರು ಬ್ಯಾಂಕ್ ವೃತ್ತದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಹಾಗೂ ವಿಜಯನಗರ(Vijayanagar)ದಲ್ಲಿ ಬಿಎಂಟಿಸಿ(BMTC) ಬಸ್ ಮೇಲೆ ಮರ ಬಿದ್ದಿತು. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ.

ಮಾಗಡಿ ರಸ್ತೆ, ರಾಜಾಜಿನಗರ, ಪಂಚಮಶೀಲನಗರ, ಬೆಂಗಳೂರು ಪ್ರೆಸ್ ಕ್ಲಬ್, ನಾಗರಬಾವಿ, ಸ್ಯಾಂಕಿರಸ್ತೆ, ಲಿಂಗರಾಜಪುರ, ಕ್ರೈಸೆಂಟ್ ರಸ್ತೆ, ಬಿನ್ನಿಮಿಲ್, ಬಸವನಗುಡಿ, ವಿಶ್ವೇಶ್ವರಯ್ಯಪುರ, ಜಾಲಹಳ್ಳಿ, ಇಂದಿರಾನಗರ, ಮತ್ತಿಕೆರೆ, ಮಲ್ಲೇಶ್ವರ, ಹೊಸಕೆರೆಹಳ್ಳಿ, ಹನುಮಂತ ನಗರ, ಜೆ.ಪಿ. ನಗರ, ಕೆ.ಜಿ.ರಸ್ತೆ, ಶೇಷಾದ್ರಿಪುರಂ, ಗಾಂಧಿನಗರ, ಕುಮಾರಸ್ವಾಮಿ ಲೇಔಟ್, ರಾಜರಾಜೇಶ್ವರಿನಗರ, ವಿಠಲ್ ಮಲ್ಯ ರಸ್ತೆ, ಸಂಪಂಗಿರಾಮನಗರ, ಜಯಮಹಲ್ ಪ್ಯಾಲೆಸ್ ರಸ್ತೆ, ಆರ್.ಟಿ. ನಗರ ಸೇರಿ ನಗರ ನಾನಾ ಭಾಗಗಳಲ್ಲಿ ಮರಗಳು ರಸ್ತೆಗೆ ಬಿದ್ದಿವು. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿ, ಸಂಚಾರಿ ಪೊಲೀಸರು ಮಾರ್ಗ ಬದಲಾಯಿಸಿದರು. ಮತ್ತೊಂದೆಡೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ(BBMP) ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು(Traffic Police) ಹರಸಾಹಸಪಟ್ಟರು.

ಶಿವಾನಂದ ವೃತ್ತ(Shivananda Circle) ಸಂಪೂರ್ಣ ಜಲಾವೃತಗೊಂಡು ಸುಮಾರು 3 ರಿಂದ 4 ಅಡಿ ನೀರು ತುಂಬಿಕೊಂಡಿತು. ಇನ್ನು ಈ ಸಮಯದಲ್ಲಿ ಅಂಡರ್ಪಾಸ್ನಲ್ಲಿ(Under-pass) ವಾಹನ ಸವಾರರು ತೆರಳದಂಥಹ ಪರಿಸ್ಥಿತಿ ನಿರ್ಮಾಣವಾಯಿತು. ಈ ಮಾರ್ಗದಲ್ಲಿ ಏಕಮುಖವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಯಿತು. ಪ್ಯಾಲೇಸ್ ಗುಟ್ಟಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ(CC Road) ಮಳೆ ನೀರಿನಿಂದ ಮುಚ್ಚಿ ಹೋಗಿ ಹಸಿರು ರಸ್ತೆಯಂತೆ ಕಂಡು ಬಂದಿತು. ಮಳೆಗೆ ಮರದ ಎಲೆಗಳು ಉದುರಿ ರಸ್ತೆ ತುಂಬಲ್ಲಾ ಹರಡಿಕೊಂಡಿದ್ದವು.

ಇನ್ನು ಮಹಾಲಕ್ಷ್ಮೀಲೌಟ್(Mahalakshmi Layout)ನಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಒದ್ದೆಯಾದವು. ಕೆ.ಆರ್.ಪುರ, ರಾಮಮೂರ್ತಿನಗರ, ಕೌದೇನಹಳ್ಳಿ, ಐಟಿಐ ಸುತ್ತಮುತ್ತ ಧಾರಾಕಾರವಾಗಿ ಮಳೆ ಸುರಿಯಿತು. ರಾಮಮೂರ್ತಿನಗರದ ತಗ್ಗು ಪ್ರದೇಶದಲಿ ಇರುವ ಮನೆಗಳಿಗೆ ಹಾಗೂ ಅಂಗಡಿಗಳಿಗೂ ನೀರು ನುಗ್ಗಿತು. ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು. ಈವರೆಗೆ 400 ಕ್ಕೂ ಹೆಚ್ಚು ದೂರುಗಳು ಬಿಬಿಎಂಪಿ ಕಂಟ್ರೋಲ್ ರೂಂಗೆ ಬಂದಿವೆ.
ಮುಂಗಾರು ಪೂರ್ವ ವರ್ಷಧಾರೆಗೆ ರಸ್ತೆಗಳೆಲ್ಲವು ಹೊಳೆ ರೂಪ ತಾಳಿತ್ತು. ನೀರಿನ ರಭಸಕ್ಕೆ ವಾಹನ ಸವಾರರು ತೊಂದರೆ ಎದುರಿಸುವಂತಾಯಿತು. ಹಲವು ಬಡಾವಣೆಗಳಲ್ಲಿ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಪರದಾಡುವಂತಾಯಿತು. ನಗರದ ಪ್ರಮುಖ ರಸ್ತೆಗಳು, ಅಂಡರ್ಪಾಸ್ ಹಾಗೂ ಜಂಕ್ಷನ್ಗಳು ಹೊಂಡಗಳಾಗಿ ಮಾರ್ಪಟ್ಟವು.

ಇದರಿಂದಾಗಿ ಪ್ರಮುಖ ರಸ್ತೆಗಳಲ್ಲಿರುವ ಮರಗಳು ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಪ್ರಮುಖ ರಸ್ತೆಗಳಲ್ಲೆಲ್ಲ ಟ್ರಾಫಿಕ್ ಜಾಮ್ ಉಂಟಾಯಿತು. ಮ್ಯಾನ್ಹೋಲ್(Manhole)ಗಳು ಹುಕ್ಕಿ ಹರಿದವು. ಒಳಚರಂಡಿಗ(UGD)ಳೆಲ್ಲ ತುಂಬಿ ರಸ್ತೆಗಳ ಮೇಲೆಯೇ ಕೊಳಚೆ ನೀರು ಹರಿಯುತ್ತಿತ್ತು. ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದ್ದ ಜನರು ತೊಂದರೆಗೆ ಒಳಗಾಗಬೇಕಾಯಿತು.
ಅವಾಂತರಗಳನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ನವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar)ರವರು ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ತುರ್ತು ಕ್ರಮಕ್ಕೆ ಮುಂದಾದರು.