ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನ.

ನವದೆಹಲಿ: ಮನೀಶ್ ಸಿಸೋಡಿಯಾ ಅವರನ್ನು ಸತತ 8 ಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಸಿಬಿಐ ಆತನನ್ನು ಬಂಧಿಸಿದೆ. ಸಿಸೋಡಿಯಾ ವಿಚಾರಣೆ ಹಿನ್ನೆಲೆಯಲ್ಲಿ ಸಿಬಿಐ ಕೇಂದ್ರ ಕಚೇರಿ ಸುತ್ತಮುತ್ತ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದರು

ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ಶೀಟ್ ಸಲ್ಲಿಸಿದ ಸುಮಾರು ಮೂರು ತಿಂಗಳ ಬಳಿಕ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾ ಅವರನ್ನು ಇಂದು ಬೆಳಿಗ್ಗೆ ವಿಚಾರಣೆಗೆ ಒಳಪಡಿಸಿದ್ದರು. ಸತತ ಎಂಟು ಗಂಟೆಗಳ ವಿಚಾರಣೆ ಬಳಿಕ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಆಮ್ ಆದ್ಮಿ ಪಕ್ಷದ (ಎಎಪಿ) ಮಹತ್ವಾಕಾಂಕ್ಷೆಯ ದೆಹಲಿ ಅಬಕಾರಿ ನೀತಿಯನ್ನು 31 ಜುಲೈ 2022 ರಂದು ರದ್ದುಗೊಳಿಸಲಾಗಿತ್ತು. ಹೊಸ ನೀತಿಯನ್ನು ರದ್ದುಗೊಳಿಸಿದ ನಂತರ, ದೆಹಲಿ ಸರ್ಕಾರವು ನವೆಂಬರ್ 17, 2020 ರ ಮೊದಲು ಜಾರಿಗೆ ತಂದ ಹಳೆಯ ಅಬಕಾರಿ ಆಡಳಿತವನ್ನು ಮರಳಿ ತರಲು ನಿರ್ಧರಿಸಿತ್ತು. ಅಬಕಾರಿ ನೀತಿ ಜಾರಿಯಾದ ತಕ್ಷಣ ಇಡಿ ಮತ್ತು ಸಿಬಿಐ ಉಪ ಮುಖ್ಯಮಂತ್ರಿ ಅವರ ಮನೆ ಮತ್ತು ಬ್ಯಾಂಕ್ ಲಾಕರ್ಗಳನ್ನೂ ಶೋಧಿಸಲಾಗಿತ್ತು.
ಸಿಬಿಐ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನ ಖಂಡಿಸಿ ದೇಶದಾದ್ಯಂತ ಸಿಬಿಐ ಕಚೇರಿಗಳ ಎದುರು ನಾಳೆ (ಸೋಮವಾರ) ಬೃಹತ್ ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಕ್ಷ (ಎಎಪಿ) ನಿರ್ಧಾರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
