Janataa24 NEWS DESK
ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಜುಲೈ 01ರಂದು ತಿಪಟೂರಿನಲ್ಲಿ ಬೃಹತ್ ಪ್ರತಿಭಟನೆ :ಶಿವನಂಜಪ್ಪ.

ಗುಬ್ಬಿ: ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಜುಲೈ 01ರಂದು ತಿಪಟೂರಿನಲ್ಲಿ ಬೆಳಗ್ಗೆ 10 ಗಂಟೆಗೆ ದಸಂಸ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದ ಸಂ ಸ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದವರು
ದೀನ ದಲಿತರಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದು ಗ್ರಾಮೀಣ ಭಾಗದಲ್ಲಿ ಗುಂಪು ರಚಿಸಿ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಂಪೆನಿಗಳು ಮಹಿಳೆಯರಲ್ಲಿ ಘರ್ಷಣೆ ಹುಟ್ಟಿಸಿದ್ದಾರೆ. ಸಾಲ ತಿರುವಳಿಗೆ ಅವಕಾಶ ನೀಡದೆ ಗುಂಪಿನ ಇತರೆ ಸದಸ್ಯರ ಮೂಲಕ ನಿಂದನೆ, ಬೈಗುಳ ಮಾಡಿಸಿ ಅಪಮಾನ ಮಾಡುತ್ತಾರೆ. ಈ ಹಿನ್ನಲೆ ಆತ್ಮಹತ್ಯೆಗೆ ಶರಣಾದ ಮೂರು ಪ್ರಕರಣ ನಿದರ್ಶನವಾಗಿದೆ. ಈ ಕಾರಣಕ್ಕೆ ಮೈಕ್ರೋ ಫೈನಾನ್ಸ್ ಪರವಾನಗಿ ರದ್ದು ಮಾಡಬೇಕು. ಆತ್ಮಹತ್ಯೆಗೆ ಕಾರಣವಾದ ಫೈನಾನ್ಸ್ ಮೇಲೆ ಪ್ರಕರಣ ದಾಖಲಿಸಿ ಮೃತ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಒತ್ತಾಯಿಸಿದರು.
ಮೈಕ್ರೋ ಫೈನಾನ್ಸ್ ಸಾಲ ಮರು ಪಾವತಿ ಮಾಡಲಾಗದೆ ಆಗಿರುವ ಅವಮಾನಕ್ಕೆ ತಿಪಟೂರು ತಾಲ್ಲೂಕಿನ ಭಾಗ್ಯಮ್ಮ, ಶರಣಯ್ಯ, ನಾರಾಯಣಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದರ್ಪ ದೌರ್ಜನ್ಯ ಖಂಡಿಸಿ ಜುಲೈ 1 ರಂದು ತಿಪಟೂರು ನಗರದಲ್ಲಿ ದಸಂಸ ವಿಭಾಗೀಯ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಗುಬ್ಬಿ ತಾಲ್ಲೂಕಿನ ಎಲ್ಲಾ ದಲಿತ ಮುಖಂಡರು ಆಗಮಿಸಲು ಮನವಿ ಮಾಡಿದರು.
ದಸಂಸ ಮಹಿಳಾ ಘಟಕದ ತಾಲ್ಲೂಕು ಸಂಚಾಲಕಿ ಶಿವಮ್ಮ ಮಾತನಾಡಿ ಮಹಿಳೆಯರನ್ನು ಸಾರ್ವಜನಿಕವಾಗಿ ಅಶ್ಲೀಲವಾಗಿ ನಿಂದಿಸಲು ಪ್ರಚೋದನೆ ನೀಡುವ ಫೈನಾನ್ಸ್ ಕಂಪೆನಿಗಳು ಮಾನಸಿಕ ಕಿರುಕುಳಕ್ಕೆ ಕಾರಣವಾಗಿ ಆತ್ಮಹತ್ಯೆಗೆ ಕಾರಣವಾಗಿದ್ದಾರೆ. ಇಂತಹ ಕಂಪೆನಿಯ ವಿರುದ್ಧ ತಿಪಟೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನೆ ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸಂಸ್ಥಾಪಕ ಸದಸ್ಯ ಕೆ.ದೊರೈರಾಜು, ರೈತ ಸಂಘದ ಚನ್ನಬಸವಣ್ಣ, ರುದ್ರಮ್ಮ ಶಿವಮೊಗ್ಗ, ಎ.ಗೋವಿಂದರಾಜು ಇತರರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಸೌಭಾಗ್ಯಮ್ಮ, ಲಕ್ಕೆನಹಳ್ಳಿ ನರಸೀಯಪ್ಪ,ಟಿ.ಜಿ.ಸಚಿನ್, ಫಣೀಂದ್ರ ಮುನಿ, ರಾಜಣ್ಣ, ಕುಮಾರ್,ಮಧು, ಅತ್ತಿಕಟ್ಟೆ ಚೇತನ್, ಗಿರೀಶ್, ದೊಡ್ಡಮ್ಮ, ಕಲ್ಪನಾ ಇತರರು ಇದ್ದರು.
ವರದಿ: ಶ್ರೀಕಾಂತ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/madhugiri-government-is-at-peoples-doorstep/