JANATAA24 NEWS DESK
Gubbi: ಕಾವೇರಿ ನೀರಿಗಾಗಿ ರೈತ ಸಂಘದಿಂದ ಪ್ರತಿಭಟನೆ–ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು.

ಗುಬ್ಬಿ : ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನಿರ್ದೇಶನ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಸ್ತುತ ವಸ್ತು ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡದ ರಾಜ್ಯ ಸರ್ಕಾರದ ವಿರುದ್ಧ ರೈತ ಸಂಫದ ಗುಬ್ಬಿ ತಾಲ್ಲೂಕು ಶಾಖೆಯ ಸದಸ್ಯರು ಹೆದ್ದಾರಿ ತಡೆದು ಪ್ರತಿಭಟಿಸಿದರು.
ಗುಬ್ಬಿ ಪಟ್ಟಣದ ಬಸ್ ನಿಲ್ದಾಣದ ಮುಂದಿನ ರಾಷ್ಟ್ರೀಯ ಹೆದ್ದಾರಿ ಬಳಿ ದಿಢೀರ್ ಜಮಾಯಿಸಿದ ರೈತ ಸಂಘದ ಮುಖಂಡರು, ಕಾರ್ಯಕರ್ತರು ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಾಜ್ಯದ ರೈತರ ಹಿತ ಕಾಯುವಂತೆ ಒತ್ತಾಯ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಕಾವೇರಿ ನೀರು ಇಲ್ಲದೆ ಜೊತೆಗೆ ಸಕಾಲಕ್ಕೆ ಮಳೆಯಾಗದೆ ತೀವ್ರ ಬರಗಾಲ ಎದುರಾಗಿ ಎಲ್ಲಾ ಡ್ಯಾಮ್ ಗಳು ಬರಿದಾಗಿದ್ದು ಎಲ್ಲಾ ನಗರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನೀರು ಬರಿದಾಗಿದೆ ಇಂತಹ ದುಸ್ಥಿತಿಯಲ್ಲಿ ನೆರೆ ರಾಜ್ಯ ತಮಿಳುನಾಡಿಗೆ 3.5 ಸಾವಿರ ಕ್ಯೂಸೆಕ್ಸ್ ನೀರು 15 ದಿನಗಳ ಕಾಲ ಸುಮಾರು 4 ಟಿಎಂಸಿ ನೀರು ಬಿಡಲು ಆದೇಶ ನೀಡಿರುವುದು ಅವೈಜ್ಞಾನಿಕ. ವಾಸ್ತವದಲ್ಲಿ ಕುಡಿಯಲು ನೀರಿಲ್ಲ. ಮುಂಗಾರು ಮಳೆ ಕೈಕೊಟ್ಟಿದೆ. ಸತ್ಯ ತಿಳಿದೂ ಸಹ ಸಮಿತಿ ಈ ರೀತಿಯ ಆದೇಶ ಹೊರಡಿಸಿದೆ. ಮಾನವೀಯತೆ ಮರೆತು ನೀರು ಹರಿಸಲು ಹೇಗೆ ಸಾಧ್ಯ ಎಂಬುದು ಸರ್ಕಾರ ಮನವರಿಕೆ ಮಾಡಬೇಕಿದೆ ಎಂದು ಕಿಡಿಕಾರಿದರು.
ರೈತ ಸಂಘ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ನೀರಿನ ಲಭ್ಯತೆಯನ್ನು ಅರಿತು ತಮಿಳುನಾಡಿಗೆ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನೂ ಬರಗಾಲ ಎದುರಿಸುವಾಗ ಕಾವೇರಿ ನಿಯಂತ್ರಣ ಸಮಿತಿ ದಿನಕ್ಕೆ 3500 ಕ್ಯೂಸೆಕ್ಸ್ ನೀರು ಹರಿಸುವಂತೆ ನಿರ್ದೇಶನ ನೀಡಿರುವುದು ಸರಿಯಲ್ಲ. ಜೊತೆಗೆ ಒಂದು ವೇಳೆ ಸರ್ಕಾರ ಒತ್ತಾಯಕ್ಕೆ ಮಣಿದು ಕೆಆರ್ ಎಸ್ ಡ್ಯಾಂ ನಲ್ಲಿ ನೀರು ಇಲ್ಲದಿರುವಾಗ ಬೇರೆ ಡ್ಯಾಂಗಳಿಂದ ನೀರು ಹರಿಬಿಡುವ ದುಸ್ಸಾಹಾಸಕ್ಕೆ ಮುಂದಾದಲ್ಲಿ ರಾಜ್ಯದ್ಯಂತ ರೈತ ಸಂಘ ಬೃಹತ್ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ರೈತರ ಅಹವಾಲು ಸ್ವೀಕರಿಸಲು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ತಹಸೀಲ್ದಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ತಹಶೀಲ್ದಾರ್ ಆರತಿ.ಬಿ ಈಗಾಗಲೇ ರಾಜ್ಯದಲ್ಲಿ ಬರಗಾಲ ತೀವ್ರಗೊಂಡ ಹಿನ್ನೆಲೆ ಸರ್ಕಾರ ಸೂಕ್ತ ನಿರ್ದೇಶನ ನೀಡಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳು ಎದುರಾಗದಂತೆ ತಾಲ್ಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿ, ಜೆ ಲೋಕೇಶ್ ಸಿ.ಟಿ.ಕುಮಾರ್, ಮಂಜುನಾಥ್, ಗುರು ಚನ್ನಬಸಪ್ಪ, ದೇವೇಗೌಡ, ಬಸವರಾಜು, ಮಹಾದೇವಯ್ಯ, ವರ್ತಕರ ಸಂಘದ ದಯಾನಂದ್, ಮಾಜಿ ಸೈನಿಕರ ಸಂಘದ ವಿವೇಕಾನಂದ, ಜೈದೇವ್ ಸೇರಿದಂತೆ ನೂರಾರು ಮಂದಿ ರೈತ ಮುಖಂಡರು ಭಾಗವಹಿಸಿದ್ದರು
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/