JANATAA24 NEWS DESK
2026 ಹೊಸ ವರ್ಷ ನೊಂದವರ ಬದುಕಲ್ಲೂ ನಗು ಮೂಡಿಸಲಿ–ಕಾಲೇಜು ವಿದ್ಯಾರ್ಥಿಗಳಿಂದ ಮಾನವೀಯ ಮಾದರಿ.

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಗಾಂಧಿನಗರದ ಕೈಮಾರ ಸಮೀಪ ವಾಸವಿದ್ದ ಸುಮಾರು 14 ಅಲೆಮಾರಿ ಕುಟುಂಬಗಳ ಗುಡಿಸಲುಗಳು ಇತ್ತೀಚೆಗೆ ಆಕಸ್ಮಿಕ ಬೆಂಕಿ ಅವಘಡಕ್ಕೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದವು. ಜೀವನಾಧಾರ ವಸ್ತುಗಳು, ಅಗತ್ಯ ದಾಖಲೆಗಳು ಹಾಗೂ ಭವಿಷ್ಯದ ಕನಸುಗಳನ್ನೇ ಕಳೆದುಕೊಂಡಿದ್ದ ಈ ಕುಟುಂಬಗಳು ದಿಕ್ಕೇ ತೋಚದ ಸಂಕಷ್ಟಕ್ಕೆ ಸಿಲುಕಿದ್ದವು. ಸರ್ಕಾರದ ಮೂಲಸೌಲಭ್ಯಗಳಾದ ವಸತಿ, ನಿವೇಶನ, ವಿದ್ಯುತ್, ಶೌಚಾಲಯ, ರಸ್ತೆ ಹಾಗೂ ಶಿಕ್ಷಣ ಇವೆಲ್ಲವೂ ಕೇವಲ ದಾಖಲೆಗಳಲ್ಲೇ ಸೀಮಿತವಾಗಿದ್ದು, ವಾಸ್ತವದಲ್ಲಿ ಇನ್ನೂ ಅಲೆಮಾರಿ ಸಮುದಾಯಕ್ಕೆ ಕೈಗೆಟುಕದ ನಕ್ಷತ್ರಗಳಾಗಿಯೇ ಉಳಿದಿವೆ ಎಂಬುದು ನೊಂದವರ ಅಳಲು.
ಇಂತಹ ಸಂಕಷ್ಟದ ಸಂದರ್ಭದಲ್ಲೂ ಮಾನವೀಯತೆಯ ಬೆಳಕಾಗಿ ಬೆಳಗುಲಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಮಾಜ ಸೇವೆಯ ನಿಜವಾದ ಅರ್ಥವನ್ನು ಸಾಕಾರಗೊಳಿಸಿದ್ದಾರೆ. ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬೆಂಕಿ ಅವಘಡಕ್ಕೆ ಒಳಗಾದ ಕುಟುಂಬಗಳ ಸಮಸ್ಯೆಗಳನ್ನು ಅರಿತು, ಅವರ ಪ್ರಾಥಮಿಕ ಅಗತ್ಯವಾದ ಕುಡಿಯುವ ನೀರಿನ ಕೊರತೆಯನ್ನು ನಿವಾರಿಸಲು ಮುಂದಾಗಿದ್ದರು.
ಸರ್ಕಾರ ಮಾಡಬೇಕಿದ್ದ ಹೊಣೆಗಾರಿಕೆಯನ್ನು ಮಾನವೀಯ ದೃಷ್ಟಿಯಿಂದ ಸ್ವಯಂ ಪ್ರೇರಿತರಾಗಿ ವಹಿಸಿಕೊಂಡ ವಿದ್ಯಾರ್ಥಿಗಳು, ಕಾಲೇಜು ಆಡಳಿತ ಹಾಗೂ ಉಪನ್ಯಾಸಕರ ಸಹಕಾರದೊಂದಿಗೆ ಕುಡಿಯುವ ನೀರಿನ ಟ್ಯಾಂಕ್ನ್ನು ಅಲೆಮಾರಿ ಕುಟುಂಬಗಳಿಗೆ ಒದಗಿಸುವ ಮೂಲಕ ನೆರವಿನ ಕೈ ಚಾಚಿದ್ದಾರೆ. ನೀರಿನ ಟ್ಯಾಂಕ್ ನೀಡುವ ಸಂದರ್ಭ ಸ್ಥಳೀಯರಲ್ಲಿ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕಣ್ಣೀರ ನಡುವೆ ಕಂಗೊಳಿಸಿದ ನಗು, ವಿದ್ಯಾರ್ಥಿಗಳ ಹೃದಯದ ಮಾನವೀಯ ಸ್ಪಂದನೆಗೆ ಮೌನದ ಅಭಿನಂದನೆ ಸಲ್ಲಿಸಿತು.
ಈ ಕುರಿತು ಮಾತನಾಡಿದ ಕಾಲೇಜಿನ ಉಪನ್ಯಾಸಕರು, “ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತರಾಗಬಾರದು. ಸಮಾಜದ ನೋವಿಗೆ ಸ್ಪಂದಿಸುವ ಹೃದಯ ಮತ್ತು ಸೇವಾ ಮನೋಭಾವವೇ ನಿಜವಾದ ಶಿಕ್ಷಣ. ಅದನ್ನು ನಮ್ಮ ಮಕ್ಕಳು ಇಂದು ಸಾಬೀತು ಮಾಡಿದ್ದಾರೆ,” ಎಂದು ಹೆಮ್ಮೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸಹ “ಹೊಸ ವರ್ಷ ಕೇವಲ ಆಚರಣೆಗೆ ಸೀಮಿತವಾಗಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂತೋಷ ತಲುಪುವಂತೆ ನಾವು ಕೊಡುಗೆ ನೀಡಬೇಕು ಎಂಬುದೇ ನಮ್ಮ ಆಶಯ,” ಎಂದು ತಮ್ಮ ಸೇವಾ ಸಂಕಲ್ಪವನ್ನು ಹಂಚಿಕೊಂಡರು.
ಈ ಘಟನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು, ಸಿನಿಮಾ,ಮೊಬೈಲ್,ಕ್ಷಣಿಕ ಮನರಂಜನೆಗಳಾಚೆಗೂ ಸಮಾಜಕ್ಕೆ ಮರಳಿ ನೀಡುವ ಕರ್ತವ್ಯ ಯುವಕರಲ್ಲಿ ಜಾಗೃತವಾಗಬೇಕೆಂಬ ಸಂದೇಶವನ್ನು ಸಾರುತ್ತದೆ. ಸಮಾಜದ ಬದಲಾವಣೆಯ ಬೀಜ ಶಾಲೆ ಕಾಲೇಜು ತರಗತಿಗಳಲ್ಲೇ ಮೊಳಕೆಯೊಡೆಯುತ್ತದೆ ಎಂಬುದಕ್ಕೆ ಬೆಳಗುಲಿ ಕಾಲೇಜಿನ ವಿದ್ಯಾರ್ಥಿಗಳ ಈ ಕಾರ್ಯ ಜೀವಂತ ಉದಾಹರಣೆಯಾಗಿದೆ.
ವರದಿ: ದೇವರಾಜ್ ಚಿಕ್ಕನಾಯಕನಹಳ್ಳಿ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.